DoubleClickMedia
ಅರಶಿನಗುಂಡಿ ಜಲಪಾತಕ್ಕೆ ಬಿದ್ದಿದ್ದ ಶರತ್ ಮೃತದೇಹ ಪತ್ತೆ

ಉಡುಪಿ, ಜು 30: ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಶರತ್ ಮೃತ ದೇಹ ಪತ್ತೆಯಾಗಿದೆ.
ಮಂಗಳೂರಿನ ಎಸ್ಡಿಆರ್ಎಫ್ ತಂಡದ ಹತ್ತು ಸಿಬ್ಬಂದಿ, ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ, ಜ್ಯೋತಿರಾಜ್ ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಸ್ಥಳೀಯರ ಸತತ ಕಾರ್ಯಾಚರಣೆಯಿಂದಾಗಿ ಒಂದು ವಾರದ ಬಳಿಕ ಶರತ್ ಮೃತದೇಹ ಇಂದು ಪತ್ತೆಯಾಗಿದೆ.
ಭದ್ರಾವತಿ ಮೂಲದ ಶರತ್ ಸ್ನೇಹಿತರೊಂದಿಗೆ ಜುಲೈ 24 ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದು, ಬಂಡೆಗಳ ಮೇಲೆ ನಿಂತು ರೀಲ್ಸ್ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಎಷ್ಟು ಕಾರ್ಯಚರಣೆ ನಡೆಸಿದ್ದರೂ ಶರತ್ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಸತತ ಕಾರ್ಯಚರಣೆಯಿಂದ 200 ಮೀಟರ್ ಕೆಳಗಡೆ ಬಂಡೆಗಲ್ಲಿನ ಒಳಗಡೆ ಸಿಲುಕಿ ಹಾಕಿಕೊಂಡಿದ್ದ ಶರತ್ ಮೃತದೇಹ ಪತ್ತೆಯಾಗಿದ್ದು, ಇದೀಗ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.